ಬೆಂಗಳೂರು ಸಮೀಪ ‘ನಾಲೆಡ್ಜ್‌ -ಹೆಲ್ತ್‌- ಇನ್ನೋವೇಶನ್ ಅಂಡ್ ರೀಸರ್ಚ್‌’ಸಿಟಿ: ಸಚಿವ ಎಂ.ಬಿ.ಪಾಟೀಲ

ಬೆಂಗಳೂರು: ನಗರದ ಹೊರವಲಯದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ ‘ನಾಲೆಡ್ಜ್‌ -ಹೆಲ್ತ್‌- ಇನ್ನೋವೇಶನ್ ಅಂಡ್ ರೀಸರ್ಚ್‌’ ಸಿಟಿ ಸ್ಥಾಪಿಸುವ ಉದ್ದೇಶವಿದ್ದು, ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ 100 ದಿನ ಪೂರೈಸಿದ ಸಂದರ್ಭದಲ್ಲಿ ಇಲಾಖೆಯ ಸಾಧನೆಗಳು, ಕೈಗೊಂಡಿರುವ ಪ್ರಮುಖ ಕ್ರಮಗಳ ಬಗ್ಗೆ ಮಾಹಿತಿ ನೀಡಲು ವಿಧಾನಸೌಧದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಬೆಂಗಳೂರು ಹೊರವಲಯದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ ‘ನಾಲೆಡ್ಜ್‌ -ಹೆಲ್ತ್‌- ಇನ್ನೋವೇಶನ್ ಅಂಡ್ ರೀಸರ್ಚ್‌’ ಸಿಟಿ ಸ್ಥಾಪಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ 1000 ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಸಿಟಿಯಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯ, ಆಸ್ಪತ್ರೆ, ಆವಿಷ್ಕಾರ- ಸಂಶೋಧನಾ ಕೇಂದ್ರಗಳಿರಲಿವೆ. ಈ ಯೋಜನೆ ಜಾಗತಿಕ ವಲಯದಲ್ಲಿ ಬೆಂಗಳೂರಿನ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ,” ಎಂದು ಅವರು ತಿಳಿಸಿದರು.

“ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯಗಳ ಸುಧಾರಣೆಗಾಗಿ ನಾವು ಮತ್ತೊಂದು ದಿಟ್ಟ ಹೆಜ್ಜೆ ಇಡುತ್ತಿದ್ದೇವೆ. ಸ್ಥಳೀಯ ಕೈಗಾರಿಕಾ ಅಸೋಸಿಯೇಷನ್‌ಗಳಿಗೆ ಪ್ರದೇಶದ ನಿರ್ವಹಣೆಯ ಜವಾಬ್ದಾರಿ ವಹಿಸಲಾಗುವುದು. ಇದರಿಂದ ಮೂಲಸೌಕರ್ಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂಬ ವಿಶ್ವಾಸವಿದೆ,” ಎಂದರು.

“ಸರ್ಕಾರ ಮತ್ತು ಉದ್ಯಮಗಳ ನಡುವಿನ ಅಂತರವನ್ನು ನೀಗಿಸುವ ನಿಟಿನಲ್ಲಿ ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಸಂವಾದ ಪ್ರಾರಂಭಿಸಿದ್ದೇನೆ. ಸ್ಟಾರ್ಟ್‌ಅಪ್‌ಗಳಿಂದ ಆರಂಭಿಸಿ ಸಂಘಟಿತ ಸಂಸ್ಥೆಗಳವರೆಗೆ, ಏರೋಸ್ಪೇಸ್‌ನಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಜತೆ ಮಾತುಕತೆ ಸಾಗಿದೆ. ಇದಲ್ಲದೇ ನೆದರ್‌ಲ್ಯಾಂಡ್ಸ್, ಜರ್ಮನಿ, ತೈವಾನ್ ಮತ್ತು ಇಸ್ರೇಲ್‌ನ ರಾಜತಾಂತ್ರಿಕರೊಂದಿಗೂ ಸಂವಾದ ನಡೆಯುತ್ತಿದ್ದು, ಈ ಮೂಲಕ ಕೈಗಾರಿಕಾ ಪರಿಸರಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಕೆಲಸ ಆಗುತ್ತಿದೆ,”ಎಂದು ಮಾಹಿತಿ ನೀಡಿದರು.

‘ಇನ್ವೆಸ್ಟ್‌ ಕರ್ನಾಟಕ’ ವೇದಿಕೆ ಪುನಾರಚನೆ
“ರಾಜ್ಯದಲ್ಲಿ ಸದೃಢ ಕೈಗಾರಿಕಾ ಪರಿಸರ ಸೃಷ್ಟಿ ಜತೆಗೆ ಬಂಡವಾಳ ಆಕರ್ಷಣೆಗೆ ‘ಇನ್ವೆಸ್ಟ್‌ ಕರ್ನಾಟಕ’ ವೇದಿಕೆಯನ್ನು ಪುನಾರಚಿಸಲಾಗುತ್ತಿದೆ. ಉದ್ಯಮದ ದಿಗ್ಗಜರು ಈ ಮಂಡಳಿಯ ಭಾಗವಾಗಿದ್ದಾರೆ. ವೆಂಚರ್ ಕ್ಯಾಪಿಟಲ್, ಪ್ರೈವೇಟ್ ಇಕ್ವಿಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿವಿಧ ವಲಯಗಳ ಅನುಭವಿಗಳನ್ನು ಒಳಗೊಂಡ ‘ಕಾರ್ಯತಂತ್ರ ಹೂಡಿಕೆ ಸಮಿತಿ’ ರಚಿಸಲಾಗಿದೆ. ಇದಲ್ಲದೇ, ಸುಲಲಿತ ವ್ಯವಹಾರಕ್ಕೆ ಅನುವು ಮಾಡಲು ಅತ್ಯಾಧುನಿಕ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸುವ ಕೆಲಸ ಆಗುತ್ತಿದೆ. ಈ ಸಂಬಂಧ ಹಲವಾರು ಸುತ್ತಿನ ಚರ್ಚೆಗಳು ನೆಡೆದಿದ್ದು, ಶೀಘ್ರದಲ್ಲೇ ಕ್ರಮ ವಹಿಸಲಾಗುತ್ತದೆ,”ಎಂದು ಇಲಾಖೆಯಲ್ಲಿ ಕೈಗೊಂಡಿರುವ ಹೊಸ ಕ್ರಮಗಳನ್ನು ವಿವರಿಸಿದರು.

“ಹೊಸ ಕೈಗಾರಿಕಾ ನೀತಿ ರಚಿಸಲು ನಮ್ಮ ಸರ್ಕಾರ ಮುಂದಾಗಿದ್ದು, ಇದರಲ್ಲಿ ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಎಲೆಕ್ಟ್ರಿಕ್ ವೆಹಿಕಲ್ ಮತ್ತು ವೇರ್‌ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಈಗಾಗಲೇ ಕರಡು ರೂಪುಗೊಂಡಿವೆ. ಸದ್ಯ ಇತರ ರಾಜ್ಯಗಳ ಕೈಗಾರಿಕಾ ನೀತಿಯ ಅಧ್ಯಯನ ನಡೆಯುತ್ತಿದ್ದು, ಶೀಘ್ರದಲ್ಲೇ ಪ್ರಗತಿಪರ ನೀತಿಯನ್ನು ಹೊರತರಲಿದ್ದೇವೆ. ಜತೆಗೆ, ಆಕರ್ಷಕ ಪ್ರೋತ್ಸಾಹಕ ಪ್ಯಾಕೇಜ್‌ಗಳನ್ನು ಘೋಷಿಸಲಿದ್ದೇವೆ,”ಎಂದು ತಿಳಿಸಿದರು.

“ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜಿಸಲು 10 ಆದ್ಯತಾ ವಲಯಗಳಲ್ಲಿ ‘ವಿಷನ್ ಗ್ರೂಪ್’ ರಚಿಸುತ್ತೇವೆ. ಏರೋಸ್ಪೇಸ್ ಮತ್ತು ಡಿಫೆನ್ಸ್, ಮೆಷಿನ್ ಟೂಲ್ಸ್, ಇಎಸ್‌ಡಿಎಂ, ಫಾರ್ಮಾಸ್ಯುಟಿಕಲ್ಸ್, ಕೋರ್ ಮ್ಯಾನುಫ್ಯಾಕ್ಚರಿಂಗ್, ಆಟೋಮೋಟಿವ್/ಎಲೆಕ್ಟ್ರಿಕ್ ವೆಹಿಕಲ್ಸ್, ಇಂಡಸ್ಟ್ರಿ 5.0, ಟೆಕ್ಸ್‌ಟೈಲ್ಸ್ ಮತ್ತು ಗ್ರೀನ್ ಮತ್ತು ಉದಯೋನ್ಮುಖ ತಂತ್ರಜ್ಞಾನ ಒಳಗೊಂಡಿದೆ,” ಎಂದರು

60,000 ಕೋಟಿ ರೂ. ಹೂಡಿಕೆ ಒಪ್ಪಂದ

“ಹೂಡಿಕೆದಾರರ ನೆಚ್ಚಿನ ತಾಣ ಕರ್ನಾಟಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಸಾಕ್ಷಿಯಾಗಿ, ನೂರು ದಿನಗಳಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 60,000 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದ ಆಗಿದೆ. ಮುಖ್ಯವಾಗಿ ಇದರಿಂದ 30,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಲು ಬಹಳ ಖುಷಿಯಾಗುತ್ತದೆ”ಎಂದು ಸಚಿವರು ಹೇಳಿದರು.

“ಫಾಕ್ಸ್‌ಕಾನ್, ಜೆಎಸ್‌ಡಬ್ಲ್ಯೂ ಎನರ್ಜಿ, ಟಾಟಾ ಎಲೆಕ್ಟ್ರಾನಿಕ್ಸ್‌ ಮತ್ತು ಐಬಿಸಿ ಮುಂತಾದ ಕಂಪನಿಗಳೊಂದಿಗಿನ ಫಲಪ್ರದ ಮಾತುಕತೆ ನಡೆಸಲಾಗಿದೆ. ಈ ಕಂಪನಿಗಳು ದೊಡ್ಡ ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಮಾಡಿವೆ. ಈ ವಿವರಗಳನ್ನು ಈಗಾಗಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ,” ಎಂದು ಅವರು ತಿಳಿಸಿದರು.

“20ಕ್ಕೂ ಹೆಚ್ಚು ಸಾಂಭಾವ್ಯ ಹೂಡಿಕೆದಾರರ ಜತೆ ಮಾತುಕತೆ ನಡೆಯುತ್ತಿದ್ದು, ಇದು ಸಫಲವಾದರೆ ರಾಜ್ಯಕ್ಕೆ 1,00,000 ಕೋಟಿ ರೂಪಾಯಿ ಬಂಡವಾಳ ಹರಿದು ಬರಲಿದೆ. ಸಂಭಾವ್ಯ ಹೂಡಿಕೆದಾರರ ಪೈಕಿ ತೈವಾನ್, ಕೊರಿಯಾ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಪ್ರಮುಖ ಕಂಪನಿಗಳು ಸೇರಿವೆ,”ಎಂದು ವಿವರ ನೀಡದರು.

2024 ಏಪ್ರಿಲ್‌ಗೆ ವಿಜಯಪುರ ವಿಮಾನ ನಿಲ್ದಾಣ

“ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳು ಭರದಿಂದ ಸಾಗಿದ್ದು, 2024ರ ಏಪ್ರಿಲ್ ವೇಳೆಗೆ ಉದ್ಘಾಟನೆ ಮಾಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಇದರಿಂದ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಆರ್ಥಿಕ ಬೆಳವಣಿಗೆಗೆ ಚೈತನ್ಯ ಬರಲಿದೆ. ಜತೆಗೆ, ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ,”ಎಂದರು.

“ಕೆಎಸ್‌ಐಐಡಿಸಿವತಿಯಿಂದ ಉತ್ತರ ಕನ್ನಡದ ತದಡಿಯಲ್ಲಿ 1,819 ಎಕರೆ ವಿಸ್ತಾರದಲ್ಲಿ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇಕೋ ಟ್ಯೂರಿಸಂ ಪಾರ್ಕ್‌ ಸ್ಥಾಪಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಅಲ್ಲದೇ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 407 ಎಕರೆ ವಿಸ್ತೀರ್ಣದಲ್ಲಿ ದೆಹಲಿಯ ಏರೋ ಸಿಟಿ ಮಾದರಿಯಲ್ಲಿ ‘ಬಿಸಿನೆಸ್‌ ಪಾರ್ಕ್‌’ ಸ್ಥಾಪಿಸಲು ಯೋಜಿಸಲಾಗುತ್ತದೆ,”ಎಂದರು.

*ಬೆಂಗಳುರು ಸಬ್ಅರ್ಬನ್ ಯೋಜನೆಯ ಮೊದಲನೆಯ ಹಂತವು 149 ಕಿ.ಮೀ. ಇದ್ದು, 2ನೇ ಹಂತದಲ್ಲಿ 452 ಕಿ.ಮೀ.ಗಳಿಗೆ ವಿಸ್ತರಿಸಲು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಸಂಬಂಧ ಕೆ-ಆರ್‌ಐಡಿಇ ಸಂಸ್ಥೆಯು ಕೇಂದ್ರ ರೈಲ್ವೆ ಸಚಿವಾಲಯದ ಅನುಮತಿಯನ್ನು ನಿರೀಕ್ಷಿಸುತ್ತಿದೆ,” ಎಂದು ತಿಳಿಸಿದರು.

ಎಂಎಸ್‌ಐಎಲ್‌- ಸಮಗ್ರ ಬದಲಾವಣೆ
“ಎಂಎಸ್‌ಐಲ್‌ನಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದ್ದು, ರಾಜ್ಯಾದ್ಯಂತ ಉನ್ನತ ದರ್ಜೆಯ 100 ಮದ್ಯ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 30 ಮಳಿಗೆಗಳನ್ನು ಆರಂಭಿಸಲಾಗುತ್ತಿದ್ದು, ಈ ಪೈಕಿ 10 ಮಳಿಗೆಗಳು ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ತೆರೆಯಲಾಗುವುದು. ಅಲ್ಲದೇ, ಸಂಸ್ಥೆಯ ಚಿಟ್‌ ಫಂಡ್‌ನಲ್ಲೂ ಹಲವು ಸುಧಾರಣೆ ತರಲಾಗುತ್ತಿದ್ದು, ಜನರ ಹಣವನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸಲಾಗುತ್ತದೆ. ಜನಪ್ರಿಯ ‘ಲೇಖಕ್‌’ ನೋಟ್‌ ಪುಸ್ತಕದ ಬ್ರ್ಯಾಂಡ್‌ಗೆ ಹೊಸ ರೂಪ ನೀಡಲಾಗುತ್ತಿದೆ. ಅದೇ ರೀತಿ ಮೈಸೂರಿನ ಮಹಾರಾಜರು ಆರಂಭಿಸಿದ್ದ ‘ಮೈಸೂರು ಸ್ಯಾಂಡಲ್ ಸೋಪ್‌’ನ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ‌ ಮಾಡಲು ಬದ್ಧರಾಗಿದ್ದೇವೆ,”ಎಂದು ಸಚಿವರು ಹೇಳಿದರು.

ಕರ್ನಾಟಕ ಮಾಡೆಲ್‌
“ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಪ್ರಮುಖ ಭರವಸೆಗಳ ಪೈಕಿ ನಾಲ್ಕನ್ನು ಮೊದಲ 100 ದಿನಗಳಲ್ಲೇ ಈಡೇರಿಸಿದ್ದು ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಸಾಧನೆ. ಐದು ಗ್ಯಾರಂಟಿಗಳ ಪೈಕಿ ನಾಲ್ಕು- ಮಹಿಳಾ ಸಬಲೀಕರಣಕ್ಕಾಗಿಯೇ ರೂಪಿಸಿದ್ದೇವೆ. ಈ ಮೂಲಕ ಇಡೀ ದೇಶಕ್ಕೆ ನಾವು ‘ಕರ್ನಾಟಕ ಮಾಡೆಲ್’ ಏನೆಂದು ಸಾಬೀತು ಪಡಿಸಿದ್ದೇವೆ. ಯಾವುದೇ ಸರ್ಕಾರದ ಮೊದಲ 100 ದಿನಗಳನ್ನು ಸಾಮಾನ್ಯವಾಗಿ ಅದರ ಭವಿಷ್ಯದ ದಿಕ್ಸೂಚಿ ಎಂದೇ ಪರಿಗಣಿಸಲಾಗುತ್ತದೆ, ಮುಂದಿನ ಪ್ರಯತ್ನಗಳಿಗೆ ಇದು ನೀಲನಕ್ಷೆ,”ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ, ಎಂಎಸ್ ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.